ಅವರ ರಾಜಕೀಯ ಭವಿಷ್ಯ ಮುಗಿದೆ, ಮೊಮ್ಮಕ್ಕಳನ್ನು ಆಟ ಆಡಿಸುತ್ತಾ ಮನೆಯಲ್ಲಿ ಇರಲಿ! | ಜನತಾ ನ್ಯೂಸ್
ವಿಜಯಪುರ : ಯಾರು ನನ್ನ ಮುಖ್ಯಮಂತ್ರಿ ಸ್ಥಾನಕ್ಕೆ ಅಡೆತಡೆ ಮಾಡಿದರೂ ಅವರ ರಾಜಕೀಯ ಭವಿಷ್ಯ ಮುಗಿದಿದೆ. ಪಾಪ ಅವರು ವಿಶ್ರಾಂತಿ ಪಡೆದುಕೊಳ್ಳಲಿ. ಮೊಮ್ಮಕ್ಕಳನ್ನು ಆಟ ಆಡಿಸುತ್ತಾ ಮನೆಯಲ್ಲಿ ಇರಲಿ ಎಂದು ವಿಜಯಪುರ ನಗರ ಕ್ಷೇತ್ರದ ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಪರೋಕ್ಷವಾಗಿ ಯಡಿಯೂರಪ್ಪ ವಿರುದ್ಧ ಲೇವಡಿ ಮಾಡಿದ್ದಾರೆ.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ರಾಜ್ಯದ ಮುಖ್ಯಮಂತ್ರಿಯಾಗಿ ಕೆಲಸ ಮಾಡುವ ತಾಕತ್ತು ಇತ್ತು, ಆದ್ರೆ ಪಕ್ಷ ನನ್ನನ್ನು ಸದುಪಯೋಗ ಮಾಡಿಕೊಳ್ಳುತ್ತಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಅಲ್ಲದೆ ಬಿಜೆಪಿ ನನ್ನ ಸದುಪಯೋಗ ಮಾಡಿಕೊಂಡರೆ ಮುಂದಿನ ಬಾರಿ ರಾಜ್ಯದಲ್ಲಿ 150 ಸ್ಥಾನಗಳು ಬರುತ್ತವೆ ಎಂದು ಹೇಳಿದರು.
ಸಚಿವ ಸಂಪುಟ ಬಗ್ಗೆ ಮಾತನಾಡಿ, ವಿಜಯಪುರಕ್ಕೆ ಈ ಬಾರಿ ಸಚಿವ ಸಂಪುಟದಲ್ಲಿ ಅನ್ಯಾಯ ಆಗಲ್ಲ, ಯಡ್ಡಿಯೂರಪ್ಪನವರ ಮನೆಯಲ್ಲಿ ಈಗಾಗಲೇ ಒಬ್ಬರು ಇದ್ದಾರೆ. ಎಷ್ಟು ಜನರಿಗೆ ಅಂತಾ ಸರ್ಕಾರದಲ್ಲಿ ಹುದ್ದೆ ಕೊಡುವುದು. ಒಂದು ಮನೆಯಲ್ಲಿ ಎಷ್ಟು ಜನ ಎಂಎಲ್ಎ, ಎಂಪಿ ಆಗಬೇಕು ಎಂದು ಬಿಎಸ್ ವೈ ವಿರುದ್ಧ ವಾಗ್ದಾಳಿ ಮುಂದುವರೆಸಿದ ಯತ್ನಾಳ್, ಬಿಜೆಪಿ ಹೈಕಮಾಂಡ್ ಗೆ ಎಲ್ಲ ಗೊತ್ತಿದೆ. ಈ ಅನುವಂಶಿಕವನ್ನು ಮುಂದುವರೆಸಬಾರದೆಂದು ಯಡ್ಡಿಯೂರಪ್ಪರನ್ನು ಕೆಳಗಿಳಿಸಿ, ಬಸವರಾಜ ಬೊಮ್ಮಾಯಿರನ್ನು ಸಿಎಂ ಮಾಡಿದ್ದಾರೆ. ಅವರಿಗೂ ಬೆನ್ನಿಗೆ ಚೂರಿ ಹಾಕದೆ ಇದ್ದರೆ ಸಾಕು ಎಂದು ಕಿಡಿಕಾರಿದರು.
ವಿಜಯಪುರದಿಂದ ಬಾಗಲಕೋಟೆವರೆಗೆ ಈಶ್ವರಪ್ಪ ಜೊತೆ ಪ್ರಯಾಣ ಮಾಡಿ ಪಕ್ಷ ಸಂಘಟನೆ ಬಗ್ಗೆ ಚರ್ಚೆ ಮಾಡಿದ್ವಿ, ಮುಂಬರುವ ಚುನಾವಣೆಯನ್ನು ಒಟ್ಟಾಗಿ ಎದುರಿಸುವ ಬಗ್ಗೆ, ಹೆಚ್ಚಿನ ಸಂಖ್ಯೆಯಲ್ಲಿ ಸೀಟ್ ತರುವ ಬಗ್ಗೆ ಚರ್ಚೆ ಮಾಡಿದ್ವಿ. ಭ್ರಷ್ಟರಿಗೆ ಹೊಗಳ ಭಟ್ಟರಿಗೆ ಇಟ್ಟುಕೊಂಡ್ರೆ ಮುಂದಿನ ಚುನಾವಣೆಯಲ್ಲಿ ಕಷ್ಟ ಆಗುತ್ತೆ ಅಂತಾ ಮಾತನಾಡದ್ವಿ ಎಂದು ತಿಳಿಸಿದ್ದಾರೆ.
ನಿನ್ನ ಹಠ ಸಾಧಿಸ್ತಿದ್ದಿಯಾ, ಇನ್ನು ಮುಂದೆ ಎಲ್ಲರು ಪಕ್ಷ ಕಟ್ಟೋಣ. ಬಹಿರಂಗವಾಗಿ ಹೇಳಿಕೆ ಕೊಡಬೇಡ ಎಂದು ನನಗೆ ಸಲಹೆ ನೀಡಿದರು. ಅವರು ಹಿರಿಯರು ಅವರ ಮಾತಿಗೆ ನಾನು ಒಪ್ಪಿದ್ದೇನೆ. ಅಲ್ಲದೆ, ಯಡ್ಡಿಯೂರಪ್ಪನವರು ಗೌರವಯುತವಾಗಿ ನಿರ್ಗಮನ ಆಗಿದ್ದಾರೆ. ಹೈಕಮಾಂಡ್ ಅವರಿಗೆ ಬಹಳ ಗೌರವ ಕೊಟ್ಟು ಪ್ರಧಾನಿ ಮೋದಿ, ರಾಷ್ಟ್ರೀಯಾಧ್ಯಕ್ಷ ನಡ್ಡಾ, ಅಮಿತ್ ಶಾ ಅವರು ಅವರಿಗೆ ಟ್ವೀಟ್ ಮಾಡಿ ಶುಭ ಕೋರಿದ್ದಾರೆ.
ನೀವು ಸಾಕಷ್ಟು ಕಷ್ಟ ಪಟ್ಟಿದ್ದೀರಿ. ಸೈಕಲ್ ತುಳಿದು ಪಕ್ಷ ಕಟ್ಟಿದ್ದೀರಿ. ಈಗ ನೀವು ಸ್ವಂತ ಹೆಲಿಕಾಪ್ಟರ್ನಲ್ಲಿ ತಿರುಗಾಡುವಂತಹ ಶಕ್ತಿ ಬಿಜೆಪಿಯಿಂದ ಸಿಕ್ಕಿದೆ. ಬಿಜೆಪಿ ಋಣ ಬಹಳ ಇದೆ. ಅದಕ್ಕೆ ನಿಮ್ಮ ನಿವೃತ್ತಿ ಜೀವನಕ್ಕೆ ಒಳ್ಳೆಯದಾಗಲಿ ಎಂದು ಸಂದೇಶದೊಂದಿಗೆ ಸ್ಪಷ್ಟವಾದ ಸಂಕೇತ ಕೊಟ್ಟಿದೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಟೀಕಿಸಿದರು.